Thursday 9 July 2015

ಯಕ್ಷಗಾನವೆಂಬ ತ್ರಿವೇಣೀ ಸಂಗಮ

  ಆಧುನಿಕ ಪ್ರಪಂಚದಲ್ಲಿ ಎಲ್ಲವೂ ಕಲೆಯೇ. ಅಲ್ಲಿ ನಡೆಯುವುದು ಸಾಂಸ್ಕೃತಿಕ ಕಾರ್ಯಕ್ರಮವೇ ಯಾ ಮನೋರಂಜನಾ ಕಾರ್ಯಕ್ರಮವಿರಲಿ. ಬಿಡಿಸಿ ಹೇಳುವುದಾದಲ್ಲಿ ಅದು ಯಕ್ಷಗಾನವಿರಲಿ, ನಾಟಕವಿರಲಿ, ಭಕ್ತಿ ಸಂಗೀತವಿರಲಿ, ಭರತನಾಟ್ಯವೇ ಇರಲಿ ಅಥವಾ ಸಿನಿಮಾವೇ ಆಗಿರಲಿ ಯಾ ಕ್ಯಾಬರೆಯೇ ಇರಲಿ ಎಲ್ಲವೂ ಒಂದೇ-ಕಲಾರಾಧನೆ ಅಥವಾ ಸಾಂಸ್ಕೃತಿಕ ಕಾರ್ಯಕ್ರಮ. ಭಾರತದ ಅರ್ಥಾನುಸಂಧಾನವೇ ಈಗ ನಶಿಸಿ ಪಾಶ್ಚಾತ್ಯರ ಸಾಲಿಗೆ ಸೇರುವ, ಅವರನ್ನು ಒಪ್ಪುವ, ಅವರನ್ನೇ ಸಮರ್ಥಿಸುವ ಮನಃಸ್ಥಿತಿ ನಮ್ಮನ್ನು ಆವರಿಸಿದೆ ಅನ್ನಬೇಕಷ್ಟೇ.
         ನಮ್ಮ ಭಾಷೆ ಸಮಾನಾರ್ಥಕ ಶಬ್ದಗಳೂ ವಿಭಿನ್ನ ಅರ್ಥಗಳನ್ನು ಕೊಡುತ್ತವೆ. ಭಾರ್ಯಾ, ಪತ್ನೀ, ದ್ವಿತೀಯಾ ಹೆಂಡತಿಯ ಪರ್ಯಾಯ ಶಬ್ದಗಳಾದರೂ ಒಳಾರ್ಥ ಬೇರೆಯೇ ಇದ್ದಂತೆ. ಕಲೆ ಬೇರೆ, ಸಾಂಸ್ಕೃತಿಕ ಕಾರ್ಯಕ್ರಮ ಬೇರೆ, ಮನೋರಂಜನಾ ಕಾರ್ಯಕ್ರಮ ಬೇರೆ. ‘ಕಲೆ’ ಎಂದರೆ ಇಂಗ್ಲೀಷ್ನ ‘art’ ಅಲ್ಲ. ಅದು ‘ಚಿತ್ರ’ ಅನ್ನುವ ಅರ್ಥಕ್ಕೆ ಇರುವಂಥದ್ದು. ಅದನ್ನು ಬಳಸಿದರೆ ಚಿತ್ರಕಲೆ ಅನ್ನುವುದಕ್ಕೆ ಏನನ್ನಬೇಕು? ದ್ವಿರುಕ್ತಿಯೇ ಅನಿವಾರ್ಯ ಆಗಬೇಕು. ಏನೇ ಇರಲಿ; ಅರ್ಥವ್ಯತ್ಯಾಸಗಳನ್ನು ಮೆಲುಕು ಹಾಕೋಣ.
        ‘ಕಲಾ’ ಎನ್ನುವ ಸಂಸ್ಕೃತ ಪದ ಕನ್ನಡದಲ್ಲಿ ‘ಕಲೆ’ ಎಂದು ಉಚ್ಚರಿಸಲ್ಪಡುತ್ತದೆ. ‘ಕಮ್ ಲಾತಿ ಇತಿ ಕಲಾ’ ಅನ್ನುವುದು ಅದರ ನಿಷ್ಪತ್ತಿ. ‘ಕ’ ಎನ್ನುವ ಅಕ್ಷರಕ್ಕೆ ‘ಭಗವಂತ’ ಅನ್ನುವ ಅರ್ಥ. ಅವನನ್ನು ತರಿಸುತ್ತದೆ ಅನ್ನುವ ಅರ್ಥದಲ್ಲಿ ‘ಕಲಾ’ ಎನ್ನುವ ಪ್ರಯೋಗ ಇರುವುದು. ಹಾಗಾಗಿ ಭಗವತ್ತತ್ವದ ಬಗ್ಗೆ ಅರಿವು ಮೂಡಿಸದೆ ಇರುವ ಮಾಧ್ಯಮವನ್ನು ಕಲಾ ಅನ್ನುವುದೆಂತು? ಸರ್ವತ್ರ ಹೇಳಲ್ಪಡುವ ‘ಕಲಶ’ ಅನ್ನುವುದೂ ಇದೇ ಅರ್ಥದಲ್ಲಿ ಇರುವಂಥದ್ದು. ‘ಕಲಾಃ ಅಸ್ಮಿನ್ ಶೇರಂತೇ ಇತಿ ಕಲಶಃ’ ಅಂದರೆ ಭಗವಂತನನ್ನು ತರುವ ಪರಿಕರಗಳು ಅಲ್ಲಿ ಮಲಗುತ್ತವೆಯಾದ್ದರಿಂದ ಅದನ್ನು ‘ಕಲಶ’ ಅನ್ನುತ್ತೇವೆ. ಆಚಾರ್ಯ ಸ್ಥಾನದಲ್ಲಿರುವ ಪುರೋಹಿತ ಮಂತ್ರಗಳ ಮೂಲಕ ಕಲೆಗಳನ್ನು ಅಂದರೆ ಭಗವಂತನನ್ನು ತರುವ ಪರಿಕರಗಳನ್ನು ಸೃಷ್ಟಿ ಕ್ರಮದಲ್ಲಿ ಆವಾಹಿಸುತ್ತಾನೆ. (ಸೃಷ್ಟಿ ಸ್ಥಿತಿ, ಸಂಹಾರ ಎನ್ನುವ ಮೂರು ಕ್ರಮಗಳಲ್ಲಿ ಇವೆ.) ಅವುಗಳನ್ನು ದೇವರ ಬಿಂಬಕ್ಕೆ ಅಭಿಷೇಕ ಮಾಡಿ ಸ್ಥಿತಿ ಕ್ರಮದಿಂದ ಆ ಕಲೆಗಳನ್ನು ಆವಾಹಿಸಿದಾಗ ಅಲ್ಲಿ ಸೃಷ್ಟಿಯಾದ ಸಾನ್ನಿಧ್ಯವು ಸ್ಥಿತಿ ರೂಪದಲ್ಲಿ ಉಳಿಯುತ್ತದೆ. ಆದ್ದರಿಂದಲೇ ಅವುಗಳು ಕಲಸಾಗಳು. ಅದೇ ರೀತಿ ಭಗವತ್ತತ್ವವನ್ನು ತರುವ ಪರಿಕರಗಳನ್ನು ‘ಕಲಾ’  ಅಥವಾ ‘ಕಲೆ’ ಅನ್ನುತ್ತೇವೆ. ಹೀಗೆ ಭಗವದ್ ಪ್ರೀತಿಗಾಗಿ ಅಲ್ಲದೆ ಇರುವ ಮಾಧ್ಯಮಗಳಿಗೆ ‘ಕಲೆ’ ಅನ್ನಲಾಗುವುದೇ ಇಲ್ಲ.  ಭಗವದ್ ಪ್ರೀತಿಗಾಗಿ ಅಂದರೆ ಕೇವಲ ‘ಸೇವೆ’ ಎಂದರ್ಥವಲ್ಲ. ರಾಮನ ಹಾಗೆ ವ್ಯವಹರಿಸುವುದು ಸೂಕ್ತ ಎಂದು ಜನರು ಅರ್ಥೈಸಿ ಧರ್ಮ ಮಾರ್ಗದಲ್ಲಿ ನಡೆದಲ್ಲಿ ಅದು ಭಗವದ್ ಪ್ರೀತಿಗಾಗಿ ಅನ್ನಬೇಕು. ಸ್ಮೃತಿಗಳ ಭಾವಾರ್ಥಗಳನ್ನು ರೂಢಿಸಿಕೊಳ್ಳುವುದು ಜೀವನಕ್ರಮದಲ್ಲಿ ಎಂದರ್ಥ. ಅಂಥವುಗಳೆಲ್ಲ ಕಲೆ ಅನ್ನಿಸಲ್ಪಡುತ್ತವೆ.
          ಇನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು. ಆಯಾ ಊರಿಗೆ ಸಂಬಂಧಿಸಿದಂತೆ ಒಂದೊಂದು ಸಂಸ್ಕೃತಿ ಇರುವುದು ಸಹಜ. ಉದಾಹರಣೆಗೆ ಕೊಡಗಿನವರ ಸೀರೆ ಉಡುವ ಕ್ರಮವೇ ಬೇರೆ. ದಕ್ಷಿಣಕನ್ನಡದವರ ಕ್ರಮವೇ ಬೇರೆ. ಬೆಂಗಳೂರಿನವರದ್ದು ಮತ್ತೊಂದು ಕ್ರಮ. ಬ್ರಾಹ್ಮಣರು ಹಿರಿಯವರಿಗೆ ನಮಸ್ಕರಿಸುವ ಕ್ರಮವೇ ಬೇರೆ. ಇತರರಿಗೆ ಗೋತ್ರಾಭಿವಂದನೆ ಇಲ್ಲದಿರುವುದರಿಂದ ಅವರ ಕ್ರಮವೇ ಬೇರೆ. ಯಾರಾದರೂ ನಮಗೆ ಸೆಲ್ಯೂಟ್ ಹೊಡೆದರೆ ನಾವೇ ಕೇಳುತ್ತೇವೆ ನೀನೇನು ಪೋಲೀಸ? ಎಂದು. ಹೀಗೆ..... ಎರಡನೇ ಮದುವೆ ಹೆಣ್ಣಿಗೆ ಕೆಲವು ಸಂದರ್ಭಗಳನ್ನು ಹೊರತುಪಡಿಸಿ ಬೇರೆಡೆ ಇಲ್ಲದಿರುವುದು ನಮ್ಮ ಹಿಂದಿನ ಸಂಸ್ಕೃತಿ. ಡೈವರ್ಸ್ ನಮ್ಮ ಸಂಸ್ಕೃತಿಯಲ್ಲ. ಇಂತಹ ಸಂದೇಶಗಳನ್ನು ಸಾರುವ ಮಾಧ್ಯಮಗಳು ಸಾಂಸ್ಕೃತಿಕ ಅನ್ನಿಸಲ್ಪಡುತ್ತವೆ. ಇದು ಕಲೆಯೊಂದಿಗೆ ಕೆಲವೊಮ್ಮೆ ಸೇರಿಕೊಂಡಿರುತ್ತವೆ, ಕೆಲವೊಮ್ಮೆ ಇಲ್ಲ.
        ಮೂರನೆಯದು ಮನೋರಂಜನಾ ಕಾರ್ಯಕ್ರಮ. ಇದಕ್ಕೆ ಯಾವ ಕಡಿವಾಣವೂ ಇಲ್ಲ. ಅವನವನ ಮನಃಸ್ಥಿತಿಗೆ ಸರಿಯಾಗಿ ಅವನಿಗೆ ಇಷ್ಟವಾಗುವುದೆಲ್ಲ ಮನೋರಂಜನೆಯ ಮಾಧ್ಯಮ ಅನ್ನಿಸಲ್ಪಡುತ್ತದೆ. ಇದು ಈಗಿನ ಅಶ್ಲೀಲ ಸಾಹಿತ್ಯ, ಅಶ್ಲೀಲ ಕುಣಿತ, ಅಶ್ಲೀಲ ಹಾಸ್ಯ ಎಲ್ಲವೂ ಆಗುತ್ತವೆ. ಈಗಿನ ಚಲನಚಿತ್ರಗಳಲ್ಲಿ ಕುಡಿತದ ದುರಭ್ಯಾಸವುಳ್ಳ ನಾಯಕನ ಆ ಕ್ರಿಯೆ ತಪ್ಪು ಎಂದು ಚಿತ್ರಿಸುವುದೇ ಇಲ್ಲ. ಅದರ ಅಭಿರುಚಿಯುಳ್ಳ ಪ್ರೇಕ್ಷಕನಿಗೆ ಆ ಮಾಧ್ಯಮ ಮನೋರಂಜನಾ ಕಾರ್ಯಕ್ರಮವಂತೂ ಹೌದೇ ಹೌದು. ಆದರೆ ಅದು ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಕಲೆಯಂತೂ ಅಲ್ಲವೇ ಅಲ್ಲ. ವಿಪರ್ಯಾಸವೆಂದರೆ  ದೇವಸ್ಥಾನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎಂದು ಹೇಳಿ ಅಶ್ಲೀಲ ಸಾಹಿತ್ಯವುಳ್ಳ ಚಲನಚಿತ್ರಗಳಿಗೆ ಕುಣಿಯುವುದನ್ನೂ ನಾವು ಕಾಣುತ್ತೆವೆ. ಹೇಳಿದರೆ ಆಗದ್ದು ಹೋಗದ್ದು ಮಾತನಾಡುವವರು ಎಂದು ನಮಗೇ ಬಿರುದು.
          ಮನೋರಂಜನಾ  ಕಾರ್ಯಕ್ರಮಗಳು ಸಂಸ್ಕೃತಿಯನ್ನು ಬಿಂಬಿಸುವಂತಿದ್ದರೆ ಅದನ್ನು ಸಾಂಸ್ಕೃತಿಕ ಕಾರ್ಯಕ್ರಮವೆಂದು ಅನ್ನಬಹುದು. ಭಾವಗೀತೆಗಳು, ಜಾನಪದ ಗೀತೆಗಳು, ಅವುಗಳಿಗೆ ಸಂಬಂಧಿಸಿದ ನೃತ್ಯಗಳು.... ಹೀಗೆ.. ಅವುಗಳೇ ಭಗವತ್ತತ್ವ ಪ್ರತಿಪಾದಕಗಳಾದರೆ ಅವುಗಳನ್ನೇ ‘ಕಲೆ’ ಎಂದೂ ಅನ್ನಬಹುದು. ಉದಾಹರಣೆಗೆ ಭಕ್ತಿಗೀತೆ, ಕೀರ್ತನೆಗಳು ಅವುಗಳನ್ನೇ ಸಾಹಿತ್ಯವಾಗಿಸಿದ ಭರತನಾಟ್ಯ, ಇತ್ಯಾದಿ. ಅವಾಗ ಕಲೆ, ಸಾಂಸ್ಕೃತಿಕ ಕಾರ್ಯಕ್ರಮ, ಮನೋರಂಜನಾ ಕಾರ್ಯಕ್ರಮ ಎನ್ನುವುದು ಒಂದೇ ಅನ್ನಲ್ಪಡುತ್ತದೆ.
       ಲಕ್ಷಣವನ್ನು ಹೇಳಿದಲ್ಲಿ ಲಕ್ಷ್ಯವನ್ನು ಹೇಳುವಾಗ ಎಷ್ಟು ವಿವರಣೆ ಬೇಕು ನೋಡಿ. ಆದರೆ ನಮಗೆ ದೊಡ್ಡ ವಿಷಯವೇ ಅಲ್ಲ. ಯಾಕೆಂದರೆ ನಾವು ಕರಾವಳಿಯವರು. ನಮಗೆ ಈ ಲಕ್ಷಣಗಳನ್ನು ಹೇಳಿದರೆ ಲಕ್ಷ್ಯದ ಹುಡುಕಾಟದ ಪ್ರಮೇಯವೇ ಬರುವುದಿಲ್ಲ. ನೇರ ಅನ್ನುತ್ತಾರೆ ‘ಯಕ್ಷಗಾನ’ ಎಂದು. ಅಂತಹ ಸರ್ವಾಂಗ ಸುಂದರ  ಕಲೆ, ಸರ್ವಾಂಗ ಸುಂದರ ಸಾಂಸ್ಕೃತಿಕ ಕಾರ್ಯಕ್ರಮ, ಸರ್ವಾಂಗ ಸುಂದರ ಮನೋರಂಜನಾ ಕಾರ್ಯಕ್ರಮ ಇನ್ನೊಂದಿಲ್ಲ ಅಂತ ಕಣ್ಮುಚ್ಚಿ ಅನ್ನಬಹುದು. ಯಾಕೆಂದರೆ ನಮಗೆ ಕಣ್ಣುಮುಚ್ಚುವ ಸಮಯದಲ್ಲಿ ತೆರೆಸಿ ಕೂರಿಸುವಷ್ಟು ಮನೋರಂಜನೆ ಅದರಲ್ಲಿ ದೊರಕುತ್ತದೆ. ಇಲ್ಲಿನ ಸಂಸ್ಕೃತಿಯ ಬಗ್ಗೆ ಚೆನ್ನಾಗಿ ತಿಳಿಸಿ ನಿರಕ್ಷರಕುಕ್ಷಿಯೂ ಕ್ರಮಬದ್ಧ ಜೀವನದ ಮೂರ್ತಸ್ವರೂಪನೆನಿಸಿಕೊಂಡಿದ್ದಾನೆ. ಆದ್ದರಿಂದಲೇ ಇದು ಸಾಂಸ್ಕೃತಿಕ ಕಾರ್ಯಕ್ರಮ. ವಿದ್ಯೆ ಕಲಿಯದವನೂ ಧರ್ಮದ, ದೇವರ ತತ್ತ್ವಗಳನ್ನು ಹೇಳಬಲ್ಲವನಾಗಿದ್ದಾನೆ. ಅದೂ ಬಾಯಿಪಾಠವಲ್ಲದೆ ಯಕ್ಷಗಾನದ ಶ್ರವಣ ಮತ್ತು ಅದರ ಮನನಗಳಿಂದ. ಆದ್ದರಿಂದ ಇದು ಕಲೆ.
     ಇಂತಹ ಕಲೆ, ಸಾಂಸ್ಕೃತಿಕ/ಮನೋರಂಜನಾ ಕಾರ್ಯಕ್ರಮಗಳ ತ್ರಿವೇಣೀ ಸಂಗಮ ಎನಿಸಿದ ಕರಾವಳಿಯ ನೆಲದಲ್ಲಿ ಹುಟ್ಟಿದ ನಾವು ನಮ್ಮ ಭೂಮಿಯನ್ನು ‘ಸ್ವರ್ಗಾದಪಿ ಗರೀಯಸೀ’ ಅನ್ನದೆ ಏನನ್ನಬೇಕು. ಧನ್ಯರು ನಾವು.

-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು
    
Vidwan Sriharinarayanadasa Asranna, Kateelu

Friday 3 July 2015

ಯಕ್ಷಗಾನವೆಂದರೆ ಅದ್ಭುತ

ಯಕ್ಷಗಾನವೆಂದರೆ ಅದ್ಭುತ. ಎಲ್ಲವೂ ನಿತ್ಯನೂತನ. ಸಮಗ್ರಕಾವ್ಯ. ಎಲ್ಲರೂ ಕವಿಗಳು. ಇಂತಹ ಕಾವ್ಯ ಜನಮನ್ನಣೆ ಪಡೆಯದೇ ಮತ್ತೆ ಯಾವುದು ಪಡೆದೀತು. ಇದರ ಅಗಾಧತೆಯನ್ನು ಮೆಲುಕು ಹಾಕೋಣ. ಅದರಿಂದ ಸಂತಸವನ್ನು ನೋಡೋಣ.
ಯಕ್ಷಗಾನದ ಪ್ರಸಂಗಕರ್ತ ಒಬ್ಬ ಯಾವುದೋ ಕಥೆಯನ್ನಾಧರಿಸಿ ಛಂದಸ್ಸಿನ ರಾಶಿಗಳನ್ನು ಹುಡುಕಿ, ಹೆಕ್ಕಿ, ಕವನಗಳನ್ನು ಬರೆಯುತ್ತಾನೆ. ಅವನ ಮನಃಸ್ಥಿತಿಯೇ ಉಳಿದವರಿಗಿಂತ ಪ್ರತ್ಯೇಕ. ಕವಿಗಳು ಸಾಮಾನ್ಯವಾಗಿ  ಕಾವ್ಯಗಳಲ್ಲಿ ಒಂದೇ ವೃತ್ತ ಯಾನೆ ಛಂದಸ್ಸನ್ನು ಬಳಸುತ್ತಾರೆ. ರಘುವಂಶ ಅನುಷ್ಟುಬ್ನಲ್ಲಿ ಇದ್ದರೆ ಇಂದ್ರವಜ್ರಾದಲ್ಲಿ ಕುಮಾರಸಂಭವ... ಹೀಗೆ ಸಂಸ್ಕೃತದಲ್ಲಿ ಕಂಡರೆ ಕುಮಾರವ್ಯಾಸ ಭಾಮಿನಿ ಷಟ್ಪದಿಯಲ್ಲಿ ಬರೆದರೆ ಹರಿಶ್ಚಂದ್ರ ತನ್ನ ಒಂದು ಕಾವ್ಯವನ್ನು ವಾರ್ಧಿಕ ಷಟ್ಪದಿಯಲ್ಲಿ...... ಹೀಗೆ ಕನ್ನಡದಲ್ಲಿ ಒಟ್ಟು ಕವಿಯ ಬರವಣಿಗೆಯ ಓಘ ಒಂದೇ ರೀತಿ ಇರುವುದು ಅವನಿಗೆ ರಸೋತ್ಕರ್ಷಕ್ಕೆ   ಸಹಕಾರಿ ಅನ್ನಬಹುದು. ಆದರೆ ಯಕ್ಷಗಾನದಲ್ಲಿಛಂದಸ್ಸು ಕ್ಷಣಕ್ಷಣಕ್ಕೆ ಬೇರೆಯೇ. ಅದರಲ್ಲೂ ಪೂರ್ಣವಾಗಿ ಸ್ವಾತಂತ್ರ್ಯ ಅವನಿಗಿಲ್ಲ. ರಸಗಳ ಬದಲಾವಣೆಗೆ ತಕ್ಕಂತೆ, ಪಾತ್ರಗಳ ಸ್ವರೂಪಕ್ಕೆ ತಕ್ಕಂತೆ ಬದಲಿಸಬೇಕು. ವಿಸ್ತಾರಕ್ಕೆ ಪುನಃ ಅವಕಾಶವಿಲ್ಲ. ಯಕ್ಷಗಾನದಲ್ಲಿ ಅದನ್ನು ವಿಸ್ತರಿಸುವವ ಇನ್ನೊಬ್ಬ. ಅವನೇ ಗದ್ಯಕವಿ ಎಂಬ ಹೆಗ್ಗಳಿಕೆಯ ಅರ್ಥಧಾರಿ. ಆದ್ದರಿಂದ ಅಷ್ಟರಲ್ಲೇ ಸೌಂದರ್ಯವೃದ್ಧಿ ಅವನ ಚಾಕಚಕ್ಯತೆ.
ಪ್ರಸಂಗಕರ್ತನ ಕೆಲಸ ಇಲ್ಲಿಗೆ ಮುಗಿಯಿತು. ಇನ್ನು ಭಾಗವತನದ್ದು. ಇದರಲ್ಲಿ ಎಷ್ಟು ಪದ್ಯಗಳನ್ನು ಭಾಗವತಿಗೆಗಾಗಿ, ಸಂದರ್ಭೋಚಿತವಾಗಿ ತೆಗೆದುಕೊಳ್ಳಬೇಕು. ಯಾವ ಪದ್ಯವನ್ನು ಯಾವ ರಾಗದಲ್ಲಿ ಹಾಡಬೇಕು. (ರಾಗದ ಭಾನೆಯಲ್ಲಿ) ......  ಯಾವ ಕಾಲಕ್ಕೆ ಯಾವ ಪಾತ್ರಕ್ಕೆ ಯಾವ ರೀತಿ ಹಾಡಿದರೆ ಚೆನ್ನ ಎನ್ನುವುದು ಅವನ ಸ್ವಾತಂತ್ರ್ಯಕ್ಕೆ ಬಿಟ್ಟದ್ದು. ಹಾಗೆಂದು ಇವನಿಗೂ ನಿಗದಿ ಪಡಿಸಿದ ಸ್ವಾತಂತ್ರ್ಯವು ಹೆಚ್ಚೇನಿಲ್ಲ. ಇವ ಮುಮ್ಮೇಳದವನ ಕುಣಿತಕ್ಕೆ ಸ್ಪಂದಿಸಬೇಕು, ಹೇಳಿದ ಅರ್ಥಕ್ಕೆ ಕಿವಿಗೊಡಬೇಕು. ಪದ್ಯ ಎತ್ತಿಕೊಡುವಾಗ ಸಮಯ ಇಲ್ಲದಿದ್ದರೆ ಜಾಗಟೆಗೆ ಒಂದು ಬಲವಾದ ಪೆಟ್ಟು; ಮುಂದೆ ಸಾಗಿ ಎಂದು ಮುಮ್ಮೇಳದವನಿಗೆ ಸೂಚನೆ. ನಂತರದ ಪದ್ಯದ ಅರ್ಥವನ್ನೂ ಹಾರಿ ಮುಂದೆ ಹೋದರೆ ಅದಕ್ಕಿಂತ ಅನಂತರದ ಪದ್ಯ ಹೇಳುವ ಅನಿವಾರ್ಯತೆ. ಆದರೆ ಇವನೇ ನಿರ್ದೇಶಕ ಅನ್ನುವುದನ್ನು ಎಲ್ಲ ತಿಟ್ಟುಗಳೂ ಒಪ್ಪುತ್ತವೆ. ಒಪ್ಪಲೇಬೇಕು ಕೂಡ. ಬಡಗುತಿಟ್ಟಿನಲ್ಲಿ ಪ್ರಧಾನ ವೇಷಧಾರಿಯನ್ನು ಎರಡನೇ ವೇಷ ಅನ್ನುವುದು ರೂಢಿ. ಒಂದನೆಯವ ಭಾಗವತನೇ ಎಂದರ್ಥ. ಅವನ ಪ್ರತಿಭೆಯಿಂದಲೇ ಎಲ್ಲವೂ ನಡೆಯಬೇಕು.
ಮದ್ದಳೆಗಾರ ಅಂದರೆ ಮದ್ದಳೆ ಬಡಿಯುವವ ಯಾ ಚೆಂಡೆಯವ ಅನ್ನುವ ವ್ಯಕ್ತಿ.. ಅವ ಚೆಂಡೆಯನ್ನು ಭಾಗವತರ ಪದ್ಯ ಕೇಳುವಂತೆ ಭಾರಿಸಬೇಕು; ಕೆಲವು ಕಡೆ ಮದ್ದಳೆ ಪ್ರಧಾನವಾಗಿ ಕೇಳುವಂತೆ. ಮುಮ್ಮೇಳದ ಕುಣಿತದವನ ಹೆಜ್ಜೆಗೂ ಒಂದು ಕಣ್ಣು ಇಡಬೇಕು. ಅವನ ಅರ್ಥದ ಸಮಯದಲ್ಲೂ ಅವನ ಕಾಲು ಯಾ ಮಾತಿನ ಏರಿಳಿತಕ್ಕೆ ಘಾತ ಬಡಿಯಬೇಕುಹಾಗೆಯೇ ಮದ್ದಳೆಯವ ಕೂಡ ಅದೇ ರೀತಿ. ಆದರೆ ಇವರಿಬ್ಬರೂ ಭಾಗವತನ ಪದ್ಯ, ಮುಮ್ಮೇಳದವರ ನಡಿಗೆಯ ಜೊತೆಗೆ ತಮ್ಮ ಸ್ವಂತ ಛಾಪಿನಿಂದ ಕಾವ್ಯ ಸೌಂದರ್ಯವರ್ಧಕಗಳೆನಿಸಿದ ಗುಣಗಳ ಸ್ಥಾನದಲ್ಲಿ ಇರುವವರು.
ಇನ್ನು ಮುಮ್ಮೇಳ. ಆಯಾ ಪಾತ್ರಗಳನ್ನು ಹೊತ್ತ ಕಲಾವಿದರುಭಾಗವತರ ಭಾವ ತುಂಬುವ ಪದ್ಯಗಳಿಗೆ ಜೀವ ತುಂಬುವವರು; ಆಹಾರ್ಯದಿಂದ ಅಲೌಕಿಕ ಲೋಕಕ್ಕೆ ಒಯ್ಯುವವರು. ಅದಕ್ಕೆ ತಕ್ಕ ಸಾತ್ವಿಕ ಹಾಗೂ ಆಂಗಿಕ ಅಭಿನಯದಿಂದ ಪ್ರೇಕ್ಷಕನಿಗೆ ತಾದ್ರೂಪ್ಯ ಯಾ ಅಭೇದ ಸಂಬಂಧೇನ ರಸಾನುಭೂತಿಯನ್ನು ನೀಡುವವರು ; ನವರಸಗಳನ್ನು ಯಥಾಯೋಗ್ಯವಾಗಿ ಬಿಂಬಿಸುವವರು.
ಇಲ್ಲಿಗೆ ಮುಗಿಯಲಿಲ್ಲ.. ಯಕ್ಷಗಾನದಲ್ಲಿ ವಾಚಿಕದಲ್ಲೂ ರಸದೌತಣವನ್ನು ಉಣಬಡಿಸುವವರು ಅನ್ನಲೇಬೇಕು. "ಗದ್ಯಮ್ ಕವೀನಾಮ್ ನಿಕಷಮ್ ವದಂತಿ" ಅಂದರೆ ಗದ್ಯದಲ್ಲಿ ಕವಿಗಳಿಗೆ ಛಂದಸ್ಸಿನ ನಿಬಂಧನೆ ಇಲ್ಲದಿರುವುದರಿಂದ ತಮ್ಮ ಪದವಲ್ಲರಿಗಳ ಮೂಲಕ ರಸೋತ್ಕರ್ಷೆಯನ್ನು ಅವರ ಪ್ರತಿಭೆಯಿಂದ ತರಬಹುದಾಗಿದೆ. ಆದ್ದರಿಂದ ಅವರ ಪ್ರತಿಭೆಗೆ ಅಂದರೆ ಪ್ರತ್ಯುತ್ಪನ್ನ ಮತಿಗೆ ಗದ್ಯವೇ ಓರೆಗಲ್ಲು.. ಯಕ್ಷಗಾನವನ್ನು ನಿತ್ಯನೂತನ ಕಾವ್ಯವಾಗಿಸುವಲ್ಲಿ ಕಾರಣನಾಗುವ ಅರ್ಥಧಾರೀ ಕಲಾವಿದ ಯಕ್ಷಗಾನದಲ್ಲಿ ಇನ್ನೊಬ್ಬ ಕವಿ.
ರಾಮಾಯಣವನ್ನು ಬರೆದ ವಾಲ್ಮೀಕಿ ಆದಿ ಕವಿ. ಅದನ್ನು ಪುನಃ ಕಾವ್ಯವಾಗಿಸಿದವರ ಸಂಖ್ಯೆ ಗಣನೆಗೆ ಸಿಕ್ಕದ್ದು.. ಸಂಸ್ಕೃತದ ಭಾಸ, ಭವಭೂತಿಯಿಂದ ಹಿಡಿದು ಕನ್ನಡದ ಕುವೆಂಪು, ವೀರಪ್ಪ ಮೊಯಿಲಿ, ತುಳವಿನ ಮಂದಾರ ಕೇಶವ ಭಟ್ಟರು ಹೀಗೆ ..... ಯಕ್ಷಗಾನದ ಕವಿಗಳು ಅದಕ್ಕಿಂತಲೂ ಹೆಚ್ಚು ಅನ್ನಬಹುದು. ಶೇಣಿಯವರೇ ರಾಮಾಯಣದಲ್ಲಿ ಅದೆಷ್ಟು ಹೊಸಕವಿತ್ವದಿಂದ ನಿತ್ಯ ಹೊಸ ಚಿಂತನೆಯ ಕವಿಯಾಗಿದ್ದರೋ  ದೇವರಿಗೇನೇ ಗೊತ್ತು. ಹಾಗೆಯೇ ಅವರ ಭೀಷ್ಮಾರ್ಜುನದ ಭೀಷ್ಮ ಹಾಗೂ ರಾಮದಾಸ ಸಾಮಗರ ಭೀಷ್ಮ ಅಜಗಜಾಂತರದ್ದು. ಹಾಗೆಂದು ಎರಡೂ ಹೃದ್ಯ. ಅರ್ಥಗಳ ಮೂಲ ಪ್ರಸಂಗ ಕಾವ್ಯ ಒಂದಕ್ಷರವೂ ವ್ಯತ್ಯಾಸವಿಲ್ಲದ್ದು ಎನ್ನುವುದು ವಿಚಿತ್ರ.
ಸಾಹಿತ್ಯಸೂರಿ ರಾಜಶೇಖರ ತನ್ನ ಕಾವ್ಯಮೀಮಾಂಸೆಯಲ್ಲಿ ಕವಿತ್ವಕ್ಕೆ ಪ್ರತಿಭೆಯೇ ಪ್ರಧಾನ ಸಾಮಗ್ರಿ ಅಂದ. ಸಹೃದಯರೇ ಕಾವ್ಯಕ್ಕೆ ಪಾತ್ರ ಅಂದರು ವಿದ್ವಾಂಸರು. ಅಂತಹ ಪ್ರತಿಭೆಗಳನ್ನೇ ಆಮೂಲಾಗ್ರವಾಗಿ ತುಂಬಿದ ಯಕ್ಷಗಾನವನ್ನು ನಿತ್ಯನವೀನ ಕಾವ್ಯವನ್ನದೆ ಮತ್ತೇನನ್ನಬೇಕೋ ನಾನರಿಯೆ.

-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
      Vidwan Sriharinarayanadasa Asranna, Kateelu